ಗಾನಭಾರತೀ ಇಬ್ಬರು ಪ್ರತಿಭಾವಂತ ಯುವಕಲಾವಿದರ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ವಿದುಷಿ ಅಶ್ವಿನಿ ಸತೀಶ್ ಹಾಗೂ ವಿದುಷಿ ಚೈತ್ರ ಶ್ರೀರಾಂ ಅವರು ಗಾಯನವನ್ನು ಪ್ರಸ್ತುತಪಡಿಸಲಿದ್ದಾರೆ.
ಸಂಜೆ 6ರಿಂದ 7:30ರವರೆಗೆ ವಿದುಷಿ ಅಶ್ವಿನಿ ಸತೀಶ್
ಸಂಜೆ 7:30 ರಿಂದ 9ರವರೆಗೆ ವಿದುಷಿ ಚೈತ್ರ ಶ್ರೀರಾಂ ಅವರು ಹಾಡುತ್ತಾರೆ.
ಇಬ್ಬರೂ ಕಲಾವಿದರಿಗೂ ವಿದುಷಿ ಎಂ ಎ ಜ್ಯೋತಿ ವಯೋಲಿನ್ನಿನಲ್ಲಿ, ವಿದ್ವಾನ್ ಪೃಥ್ವಿ ಕೃಷ್ಣ ಅವರು ಮೃದಂಗದಲ್ಲಿ ಹಾಗೂ ವಿದ್ವಾನ್ ಅಜಯ್ ಘಟದಲ್ಲಿ ಸಹಕರಿಸಲಿದ್ದಾರೆ.
ಅಶ್ವಿನಿ ಸತೀಶ್ ಅವರು ಪ್ರಾರಂಭಿಕ ಶಿಕ್ಷಣವನ್ನು ವಿದ್ವಾನ್ ಎಚ್ ಎಸ್ ನಾಗರಾಜ್ ಅವರಲ್ಲಿ ಪಡೆದು ಅನಂತರ ವಿದುಷಿ ಡಾ. ಟಿ.ಎಸ್ ಸತ್ಯವತಿ ಅವರಲ್ಲಿ ಹೆಚ್ಚಿನ ಮಾರ್ಗದರ್ಶನ ಪಡೆಯುತ್ತಿದ್ದಾರೆ. ಎಂ. ಮ್ಯೂಸಿಕ್ನಲ್ಲಿ ಪ್ರಥಮ ಸ್ಥಾನ ಗಳಿಸಿರುವ ಇವರು ಆಕಾಶವಾಣಿಯ ‘ಬಿ’ ದರ್ಜೆ ಕಲಾವಿದರು. ನಾದ ಇನ್ಬಂ, ಷಣ್ಮುಗಾನಾಂದ ಫೈನ್ ಆಟ್ರ್ಸ್,, ನಾದಬ್ರಹ್ಮ ಸಂಗೀತ ಸಭಾ ಮೊದಲಾದ ಪ್ರತಿಷ್ಠಿತ ಸಭೆಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ. ಉಸ್ತಾದ್ ಫೈಯಾಜ್ ಖಾನ್ ಮೊದಲಾದವರ ಜೊತೆ ಜುಗಲ್ಬಂದಿ ಕಾರ್ಯಕ್ರಮ ನೀಡಿದ್ದಾರೆ. ದುಬೈ, ಸಿಂಗಪುರ್ ಮೊದಲಾದ ಕಡೆಗಳಲ್ಲಿಯೂ ಕಾರ್ಯಕ್ರಮ ನೀಡಿದ್ದಾರೆ. ಅನನ್ಯ ಯುವ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.
ಚೈತ್ರ ಶ್ರೀರಾಂ ಖ್ಯಾತ ವಾಗ್ಗೇಯಕಾರರಾದ ಸಿ ರಂಗಯ್ಯನವರ ಮೊಮ್ಮಗಳು. ತಾಯಿ ಶಶಿಕಲಾ ಪ್ರಸನ್ನ ಅವರಿಂದ ಕಲಿಯಲು ಆರಂಭಿಸಿ ಮುಂದೆ ವಿದುಷಿ ಡಾ. ಆರ್. ಎನ್. ಶ್ರೀಲತಾ, ವಿದುಷಿ ಶ್ಯಾಮಲಾ ವೆಂಕಟೇಶ್ವರನ್ ಅವರಲ್ಲಿ ಶಿಕ್ಷಣ ಮುಂದುವರಿಸಿ ಈಗ ವಿದುಷಿ ಬಾಂಬೆ ಜಯಶ್ರೀಯವರಿಂದ ಸಂಗೀತದ ಸೂಕ್ಷ್ಮಗಳನ್ನು ಅರಿಯುತ್ತಿದ್ದಾರೆ. ಮದ್ರಾಸ್ ಮ್ಯೂಸಿಕ್ ಅಕಾಡೆಮಿ, ಕೃಷ್ಣಗಾನ ಸಭಾ, ನಾರದ ಗಾನ ಸಭಾ ಮೊದಲಾದ ಸಭೆಗಳ ಜೊತೆಗೆ ಮುಂಬೈ, ವಿಶಾಖಪಟ್ಟಣ, ಮುಂತಾದ ಕಡೆಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ.
ಖ್ಯಾತ ವಾಗ್ಗೇಯಕಾರರ ಎಚ್ ಯೋಗನರಸಿಂಹಂ ಅವರ ಮೊಮ್ಮಗಳಾದ ವಿದುಷಿ ಎಂ ಎ ಜ್ಯೋತಿ ಲಾಲ್ಗುಡಿ ಜಯರಾಮನ್ ಅವರಲ್ಲಿ ಕಲಿತು, ಪಿಟೀಲು ಹಾಗೂ ಗಾಯನಗಳೆರಡರಲ್ಲೂ ಪ್ರೌಢಿಮೆಯನ್ನು ಸಾಧಿಸಿರುವ ಕಲಾವಿದೆ.
ವಿದ್ವಾನ್ ಪೃಥ್ವಿ ಕೃಷ್ಣ ಮನ್ನಾರ್ಗುಡಿ ಈಶ್ವರನ್ ಅವರ ಶಿಷ್ಯ. ಲಯವಾದ್ಯದಲ್ಲಿ ಸಾಕಷ್ಟು ಪ್ರೌಢಿಮೆ ಗಳಿಸಿ ಹೆಸರು ಮಾಡಿರುವ ಕಲಾವಿದ.
ವಿದ್ವಾನ್ ಅಜಯ್ ವಿದ್ವಾನ್ ತುಮಕೂರು ಬಿ ರವಿಶಂಕರ್ ಅವರಲ್ಲಿ ಲಯವಾದ್ಯದ ಸೂಕ್ಷ್ಮಗಳನ್ನು ಕಲಿಯುತ್ತಾ ಹೆಚ್ಚಿನ ಭರವಸೆ ಮೂಡಿಸುತ್ತಿರುವ ಯುವಕಲಾವಿದ.