ಗಾಂಧಿ 150ರ ನೆನಪಿಗಾಗಿ ಒಂದು ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ವಿದ್ವಾನ್ ಮಾನಸನಯನ ಅವರು ಗಾಂಧೀಜಿಯವರನ್ನು ಕುರಿತ ಕವನಗಳನ್ನು ಆಧರಿಸಿದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನು ಪ್ರಸ್ತುತ ಪಡಿಸುತ್ತಾರೆ. ಇದು ರಾಷ್ಟ್ರಪಿತನಿಗೆ ಗಾನಭಾರತೀ ಸಲ್ಲಿಸುತ್ತಿರುವ ವಿಶೇಷ ಸಂಗೀತ ನಮನ ಅವರೊಂದಿಗೆ ವಿದುಷಿ ನಳಿನಾ ಮೋಹನ್ ಅವರು ವಯೋಲಿನ್ನಿನಲ್ಲಿ, ವಿದ್ವಾನ್ ಸಾಯಿಶಿವು ಲಕ್ಷ್ಮೀಕೇಶವ್ಅವರು ಮೃದಂಗದಲ್ಲಿ ಮತ್ತು ವಿದ್ವಾನ್ ಎಸ್ ಎನ್ ನಾರಾಯಣಮೂರ್ತಿ ಅವರು ಘಟದಲ್ಲಿ ಸಹಕರಿಸಲಿದ್ದಾರೆ.
ವಿದ್ವಾನ್ ಮಾನಸ ನಯನ ವಿದುಷಿ ಎಸ್ ಕೆ ವಸುಮತಿಯವರಿಂದ ಸಂಗೀತದ ಕಲಿಕೆಗೆ ಕಾಲಿಟ್ಟು ಅನಂತರ ವಿದ್ವಾನ್ ವೈರಮಂಗಲಂ ಲಕ್ಷ್ಮಿ ನಾರಾಯಣ, ಅನಂತರ ಸಂಗೀತ ಕಲಾನಿಧಿ ವಿದ್ವಾನ್ ಆರ್ ಕೆ ಶ್ರೀಕಂಠನ್ ಅವರಲ್ಲಿ ಕಲಿತು, ಈಗ ಸಂಗೀತ ಕಲಾನಿಧಿ ವಿದುಷಿ ಆರ್ ವೇದವಲ್ಲಿಯವರಲ್ಲಿ ಕಲಿಕೆಯನ್ನು ಮುಂದುವರಿಸುತ್ತಿದ್ದಾರೆ. ಇವರೇ ಅಲ್ಲದೆ ವಿದುಷಿ ಪುಷ್ಪಾ ಶ್ರೀನಿವಾಸನ್, ಸಂಗೀತ ಕಲಾನಿಧಿ ವಿದ್ವಾನ್ ಚಿತ್ರವೀಣಾ ಎನ್ ರವಿಕಿರಣ್ ಅವರಿಂದಲೂ ಮಾರ್ಗದರ್ಶನ ಪಡೆದ ಸೌಭಾಗ್ಯಇವರದು. ಕರ್ನಾಟಕ ಸರ್ಕಾರ ನಡೆಸಿರುವ ಸೀನಿಯರ್ ಮತ್ತು ವಿದ್ವತ್ ಪರೀಕ್ಷೆಗಳಲ್ಲಿ ಪ್ರಥಮ ರ್ಯಾಂಕ್ ಗಳಿಸಿರುವ ಶ್ರೀಯುತರು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿದ್ಯಾರ್ಥಿ ವೇತನವನ್ನು ಪಡೆದಿದ್ದಾರೆ. ಆಕಾಶವಾಣಿ ಸ್ಪರ್ಧೆಗಳು, ಸೌತ್ ಸೆಂಟ್ರಲ್ ಜೋನ್ ನಾಗಪುರ, ಶ್ರುತಿಮಂಜರಿ ಪ್ರತಿಷ್ಠಾನ ಮುಂತಾದವರು ನಡೆಸುವ ಸ್ಪರ್ಧೆಗಳಲ್ಲಿ ಪ್ರಥಮ ಬಹುಮಾನ ಗಳಿಸಿದ್ದಾರೆ. ದೇಶದಾದ್ಯಂತ ವಿವಿಧ ವೇದಿಕೆಗಳಲ್ಲಿ ಕಚೇರಿಗಳನ್ನು ಪ್ರಸ್ತುತಪಡಿಸಿದ್ದಾರೆ. ಗುರು ಆರ್ ಕೆ ಶ್ರೀಕಂಠನ್ ಅವರಿಗೆ ಗಾಯನದಲ್ಲಿ ಸಹಕರಿಸುವ ಅದೃಷ್ಟವೂ ಇವರದಾಗಿತ್ತು. ಹಲವಾರು ಪ್ರಾತ್ಯಕ್ಷಿಕೆಗಳನ್ನೂ ವಿಷಯಾಧಾರಿತ ಕಚೇರಿಗಳನ್ನೂ ಪ್ರಸ್ತುತ ಪಡಿಸಿದ್ದಾರೆ.
ವಿದುಷಿ ನಳಿನಾ ಮೋಹನ್ ಕರ್ನಾಟಕದ ಹಿರಿಯ, ಅನುಭವಿ ವಯೋಲಿನ್ ವಾದಕರು. ವಿದ್ವಾನ್ ಆರ್ ಆರ್ ಕೇಶವ ಮೂರ್ತಿ ಹಾಗೂ ವಿದ್ವಾನ್ ಆನೂರು ರಾಮಕೃಷ್ಣ ಅವರ ಶಿಷ್ಯರು. ಹಲವು ಪ್ರಶಸ್ತಿಗಳಿಂದ ಗೌರವಿಸಲ್ಪಟ್ಟಿದ್ದಾರೆ.
ವಿದ್ವಾನ್ ಸಾಯಿಶಿವು ಲಕ್ಷ್ಮೀಕೇಶವ ಇಂದು ಮೃದಂಗ ವಾದನದಲ್ಲಿ ಹೆಸರು ಮಾಡಿರುವ ಯುವ ಕಲಾವಿದ. ವಿದ್ವಾನ್ ಕಾರೈಕ್ಕುಡಿ ಮಣಿಯವರ ಶಿಷ್ಯರು.
ವಿದ್ವಾನ್ ನಾರಾಯಣಮೂರ್ತಿಯವರು ಹಿರಿಯ ಲಯವಾದಕರು. ಖ್ಯಾತ ಕಲಾವಿದರಿಗೆಲ್ಲಾ ಲಯವಾದನ ಸಹಕಾರ ನೀಡಿ ಮೆಚ್ಚುಗೆ ಗಳಿಸಿರುವ ಶ್ರೀಯುತರು ಹಲವಾರು ಪ್ರತಿಷ್ಠಿತ ಸಭೆಗಳಲ್ಲಿಯೂ ಕಾರ್ಯಕ್ರಮ ನೀಡಿದ್ದಾರೆ.