ಟಿ ಪಿ ವೈದ್ಯನಾಥನ್ ಅವರಿಂದ ಗಾಯನ
ಗಾನಭಾರತೀ ಸೆಪ್ಟೆಂಬರ್ 28ರಂದು, ಸಂಜೆ 6 ಗಂಟೆಗೆ ಇಂದಿರಾ ವೈದ್ಯನಾಥನ್ ಸಂಸ್ಮರಣಾರ್ಥವಾಗಿ ಹಿರಿಯ ಗಾಯಕರಾದ ವಿದ್ವಾನ್ ಟಿ ಪಿ ವೈದ್ಯನಾಥನ್ ಅವರಿಂದ ಗಾಯನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಹರೀಶ್ ನಾರಾಯಣನ್ ಮತ್ತು ಶಿವರಾಮನ್ ಅರುಣಾಚಲಂ ಅವರ ಸಹಗಾಯನವಿರುತ್ತದೆ. ಅವರೊಂದಿಗೆ ವಿದುಷಿ ಚಾರುಲತಾ ರಾಮಾನುಜಂ ಅವರು ವಯೋಲಿನಿನಲ್ಲಿ, ವಿದ್ವಾನ್ ಕೆ ಯು ಜಯಚಂದ್ರರಾವ್ ಅವರು ಮೃದಂಗದಲ್ಲಿ ಮತ್ತು ವಿದ್ವಾನ್ ಎಸ್ ಮಂಜುನಾಥ್ ಘಟದಲ್ಲಿ ಸಹಕರಿಸಲಿದ್ದಾರೆ.
ವಿದ್ವಾನ್ ಟಿ ಪಿ ವೈದ್ಯನಾಥನ್ ಅವರು ಆರರ ಹರೆಯದಲ್ಲೇ ಸಂಗೀತ ಕಲಿಯಲು ಪ್ರಾರಂಭಿಸಿದರು. ಸಂಗೀತ ಚೂಡಾಮಣಿ ಮೈಸೂರು ಬಿ ಕೆ ಪದ್ಮನಾಭರಾವ್ ಅವರ ಶಿಷ್ಯರು. ಕೇವಲ 16 ವರ್ಷದವರಿದ್ದಾಗಲೇ ಆಕಾಶವಾಣಿಯಲ್ಲಿ ಹಾಡಲಾರಂಭಿಸಿದರು. ನಂತರ ಚೆನ್ನೈಗೆ ತೆರಳಿ ತಮ್ಮ ಸಂಗೀತ ಕೃಷಿಯನ್ನು ಮುಂದುವರಿಸಿ ಪ್ರಮುಖ ಸಂಗೀತಗಾರರಾಗಿ ಬೆಳೆದರು. ಆಕಾಶವಾಣಿ ಹಾಗೂ ದೂರದರ್ಶನಗಳಲ್ಲಿ 'ಎ' ಗ್ರೇಡ್ ಕಲಾವಿದರಾಗಿರುವ ಇವರು ಅರ್ಥಶಾಸ್ತ್ರದ ಎಂ ಎ ಪದವೀಧರರು. ಆಕಾಶವಾಣಿಯ ರಾಷ್ಟ್ರೀಯ ಕಾರ್ಯಕ್ರಮವೇ ಅಲ್ಲದೇ ಹಲವಾರು ಪ್ರತಿಷ್ಠಿತ ಸಭೆ, ಉತ್ಸವಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ, ಹಲವಾರು ಪ್ರಾತ್ಯಕ್ಷಿಕೆ ಗಳನ್ನು ನೀಡಿರುವ ಶ್ರೀಯುತರು ಮೈಸೂರು ಸದಾಶಿವರಾಯರನ್ನು ಕುರಿತ ಸಂಗೀತರೂಪಕ ಸಿದ್ಧಪಡಿಸಿದ್ದಾರೆ. 'ಸದಾಶಿವ ಕುಸುಮಾಂಜಲಿ' ಎಂಬ ಕೃತಿಯನ್ನು ರಚಿಸಿದ್ದಾರೆ. ಚೆನ್ನೈನ ಪ್ರತಿಷ್ಠಿತ ಕಲಾಕ್ಷೇತ್ರದಲ್ಲಿ ಹಲವು ವರ್ಷಗಳ ಕಾಲ ಸಂಗೀತ ಬೋಧನೆ ಮಾಡಿದ ಕೀರ್ತಿ ಇವರದ್ದು. ಇವರ ಮಾರ್ಗದರ್ಶನದಲ್ಲಿ ಹಲವು ಶಿಷ್ಯರು ಇಂದು ಸಂಗೀತ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. "ಸಂಗೀತ ಸೇವಾ ನಿರತ", "ಸಂಗೀತ ಕಲಾ ಪ್ರವೀಣ", "ಸಂಗೀತ ವಿದ್ಯಾನಿಧಿ" ಹಾಗೂ "ನಾದಬ್ರಹ್ಮ" ಮುಂತಾದ ಪ್ರತಿಷ್ಠಿತ ಪ್ರಶಸ್ತಿಗಳಿಗೆ ಶ್ರೀಯುತರು ಭಾಜನರಾಗಿದ್ದಾರೆ.