ಕೋವಿಲಡಿ ಮಧ್ವಪ್ರಸಾದ್ ಅವರ ಗಾಯನ
ಗಾನಭಾರತೀ ಅಕ್ಟೋಬರ್ 5ರಂದು ಸಂಜೆ 6ಗಂಟೆಗೆ ವಿದ್ವಾನ್ ಕೋವಿಲಡಿ ಮಧ್ವಪ್ರಸಾದ್ ಅವರ ಗಾಯನ ಕಾರ್ಯಕ್ರಮವನ್ನು ಆಯೋಜಿಸಿದೆ. ವಿದ್ವಾನ್ ಮತ್ತೂರು ಆರ್ ಶ್ರೀನಿಧಿ ಅವರು ವಯೋಲಿನಿನಲ್ಲಿ, ವಿದ್ವಾನ್ ಜಿ ಎಸ್ ರಾಮಾನುಜಂ ಅವರು ಮೃದಂಗದಲ್ಲಿ ಮತ್ತು ವಿದ್ವಾನ್ ವಿ ಎಸ್ ರಮೇಶ್ ಅವರು ಮೋರ್ಸಿಂಗಿನಲ್ಲಿ ಸಹಕರಿಸಿಲಿದ್ದಾರೆ.
ವಿದ್ವಾನ್ ಕೋವಿಲಡಿ ಮಧ್ವಪ್ರಸಾದ್ ತಮಿಳುನಾಡಿನ ಖ್ಯಾತ ವಿದ್ವಾಂಸರೂ, ಹರಿದಾಸರ ಕೃತಿಗಳ ಗಾಯನದಲ್ಲಿ ಪರಿಣತರೂ ಆದ ವಿದ್ವಾನ್ ಕೋವಿಲಡಿ ಆರ್ ರಂಗರಾಜನ್ ಅವರ ಪುತ್ರರೂ ಹಾಗೂ ಶಿಷ್ಯರು. ಇವರು ಗಾಯನ ಹಾಗೂ ಮೃದಂಗವಾದನ ಎರಡರಲ್ಲೂ ಪರಿಣತರು ಹಾಗೂ ಕ್ರಮವಾಗಿ ಆಕಾಶವಾಣಿಯ ‘ಎ’ ಹಾಗೂ ‘ಎ ಟಾಪ್’ ಕಲಾವಿದರು. ಮೃದಂಗದಲ್ಲಿ ಅವರು ವಿದ್ವಾನ್ ಕಣದುಕಾಂತ್ ಪಿ ಮಲೆಯಪ್ಪ ಅಯ್ಯರ್ ಅವರ ಶಿಷ್ಯರು. ದೇಶವಿದೇಶಗಳಲ್ಲಿ ತಮ್ಮ ಪ್ರತಿಭೆಯನ್ನು ಮೆರೆದಿರುವ ಮಧ್ವಪ್ರಸಾದರ ಗಾಯನ ಕಛೇರಿಗಳಿಗೆ ಖ್ಯಾತ ವಿದ್ವಾಂಸರಾದ ಟಿ ಕೆ ಮೂರ್ತಿ, ಶ್ರೀಮುಷ್ಣಂ ರಾಜಾರಾವ್ ತಿರುಚ್ಚಿ ಸುರೇಂದ್ರನ್ ಮುಂತಾದ ಹಿರಿಯರೆಲ್ಲರೂ ಪಕ್ಕವಾದ್ಯ ನುಡಿಸಿದ್ದಾರೆ. ಅಂತೆಯೇ ಇವರು ಎನ್ ರಮಣಿ, ಎಸ್ ರಾಮನಾಥನ್, ಶೇಷಗೋಪಾಲನ್, ಮುಂತಾದ ವಿದ್ವಾಂಸರಿಗೆ ಮೃದಂಗ ನುಡಿಸಿದ್ದಾರೆ. ವಿಭಿನ್ನ ಭಾಷೆಯ ಕೃತಿಗಳಿಗೆ ರಾಗ ಯೋಜಿಸಿರುವ ಹೆಗ್ಗಳಿಕೆ ಶ್ರೀಯುತರದು. ಮದ್ರಾಸ್ ಮ್ಯೂಸಿಕ್ ಅಕಾಡೆಮಿ, ಕೃಷ್ಣಗಾನ ಸಭಾ, ಮುಂತಾದ ಸಭೆಗಳ ಪ್ರಶಸ್ತಿಗಳಿಗೆ ಪಾತ್ರರಾಗಿರುವ ಇವರು, ಕಂಚಿ ಕಾಮಕೋಟಿ ಪೀಠ, ಅಹೋಬಲ ಮಠ ಮುಂತಾದವುಗಳ ಆಸ್ಥಾನ ವಿದ್ವಾಂಸರು. ಗುರುಗಳಾಗಿಯೂ ಶ್ರೀಯುತರು ಖ್ಯಾತರು.