ವಿದ್ವಾನ್ ಎಂ ಜೆ ಶ್ರೀನಿವಾಸ ಅಯ್ಯಂಗಾರ್ ಸಂಸ್ಮರಣ ವೀಣಾ ಕಾರ್ಯಕ್ರಮ
ಗಾನಭಾರತಿಯಲ್ಲಿ ಫೆಬ್ರುವರಿ 21 ಹಾಗೂ 22ರ ಸಂಜೆ 6 ಗಂಟೆಗೆ ವಿದ್ವಾನ್ ಎಂ ಜೆ ಶ್ರೀನಿವಾಸ ಅಯ್ಯಂಗಾರ್ ಸಂಸ್ಮರಣ ವೀಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಫೆಬ್ರವರಿ 21ರಂದು ಎಂಜೆಎಸ್ ನೆನಪಿನ ರಾಷ್ಟ್ರೀಯ ವೀಣಾ ಸ್ಪರ್ಧೆಯ ವಿಜೇತರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಸಂಜೆ 6ರಿಂದ ಸುರಭಿ ಗೋಪಾಲ್ ಅವರ ವೀಣೆ ಕಾರ್ಯಕ್ರಮವಿರುತ್ತದೆ. ಅನಂತರ 7:15ರಿಂದ ರಕ್ಷಿತಾ ರಮೇಶ್ ಅವರ ವೀಣೆ ಕಾರ್ಯಕ್ರವಿರುತ್ತದೆ. ಪಕ್ಕವಾದ್ಯದಲ್ಲಿ ಮೈಸೂರು ಎ ರಾಧೇಶ್ ಅವರು ಮೃದಂಗದಲ್ಲಿ ಹಾಗೂ ವಿದ್ವಾನ್ ಎಸ್ ಮಂಜುನಾಥ್ ಘಟದಲ್ಲಿ ಸಹಕರಿಸುತ್ತಾರೆ.
ಫೆಬ್ರ್ರುವರಿ 22, 2019, ಸಂಜೆ 6 ಗಂಟೆಗೆ, ವಿದುಷಿ ಕಲ್ಯಾಣಿ ಗಣೇಶನ್ ಅವರ ವೀಣಾವಾದನ ಕಾರ್ಯಕ್ರಮವಿರುತ್ತದೆ. ಅವರಿಗೆ ವಿದ್ವಾನ್ ವಿ ಎಂ ಗಣೇಶನ್ ಅವರು ಮೃದಂಗದಲ್ಲಿ ಹಾಗೂ ವಿದ್ವಾನ್ ಜಿ.ಎಸ್ ರಾಮಾನುಜನ್ ಘಟದಲ್ಲಿ ಸಹಕರಿಸಲಿದ್ದಾರೆ.
ಕಲಾವಿದರ ಪರಿಚಯ
ಸುರಭಿ ಗೋಪಾಲ್: ಪ್ರಥಮ ವರ್ಷದ ಆಯುರ್ವೇದ ವೈದ್ಯಕೀಯ ಓದುತ್ತಿರುವ ಸುರಭಿ ಗೋಪಾಲ್ ಖ್ಯಾತ ವೀಣಾ ವಿದುಷಿ ಗೀತಾ ರಮಾನಂದ್ ಅವರ ಶಿಷ್ಯೆ. ಕೇಂದ್ರ ಸರ್ಕಾರದ ಶಿಷ್ಯವೇತನ ಪಡೆಯುತ್ತಿರುವ ಸುರಭಿ ಗಾಯನ ಸಮಾಜ, ಎಂಜೆಎಸ್ ನೆನಪಿನ ಸ್ಪರ್ಧೆ, ಮಲ್ಲೇಶ್ವರಂ ಸಂಗೀತಸಭಾದಂತಹ ಹಲವು ಪ್ರತಿಷ್ಠಿತ ಸಭೆಗಳು ನಡೆಸುವ ಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿದ್ದಾಳೆ. ಹಲವು ಪ್ರತಿಷ್ಠಿತ ಸಭೆಗಳಲ್ಲಿ ಈಗಾಗಲೇ ತನಿ ಕಛೇರಿಗಳನ್ನು ಪ್ರಸ್ತುತಪಡಿಸಿದ್ದಾಳೆ.
ರಕ್ಷಿತಾ ರಮೇಶ್: ಪ್ರಥಮ ಬಿ.ಎಸ್ಸಿ ಓದುತ್ತಿರುವ ರಕ್ಷಿತಾ ರಮೇಶ್ ಆಕಾಶವಾಣಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದು ಆಕಾಶವಾಣಿಯ ಬಿ ದರ್ಜೆ ಕಲಾವಿದೆಯಾಗಿದ್ದಾಳೆ. ತಾಯಿ ಚೈತ್ರ ರಮೇಶ್ ಅವರಲ್ಲಿ ಕಲಿಕೆಯನ್ನು ಆರಂಭಿಸಿ, ಈಗ ಖ್ಯಾತ ವಿದುಷಿ ಯೋಗವಂದನಾ ಅವರಲ್ಲಿ ಮುಂದುವರಿಸುತ್ತಿದ್ದಾಳೆ. ಕೇಂದ್ರ ಸರ್ಕಾರದ ಸಿಸಿಆರ್ಟಿ ಶಿಷ್ಯವೇತನ ಪಡೆಯುತ್ತಿರುವ ರಕ್ಷಿತಾ ಎಂಜೆಎಸ್ ನೆನಪಿನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ನಾದಕಿಶೋರ ಬಹುಮಾನ ಮುಂತಾದವುಗಳಿಗೆ ಭಾಜನಳಾಗಿದ್ದಾಳೆ. ಈಗಾಗಲೇ ದೇಶದ ಹಲವು ಭಾಗಗಳಲ್ಲಿ ಕಾರ್ಯಕ್ರಮ ನೀಡಿದ್ದಾಳೆ.
ಕಲ್ಯಾಣಿ ಗಣೇಶನ್ ಅವರು ಸಂಗೀತವನ್ನು ಆರಂಭದಲ್ಲಿ ತಮ್ಮ ತಾಯಿಯಿಂದಲೇ ಕಲಿಯಲಾರಂಭಿಸಿದರು. ಅವರು ಗಾಯನ ಶಿಖಾಮಣಿ ಹರಿಕೇಶನಲ್ಲೂರ್ ಮುತ್ತಯ್ಯ ಭಾಗವತರ ಶಿಷ್ಯ ಪರಂಪರೆಗೆ ಸೇರಿದವರು. ಅನಂತರ ಶ್ರೀಮತಿ ಬಾಲಾಂಬಾಳ್ ಅವರಲ್ಲಿ ಕಲಿಕೆಯನ್ನು ಮುಂದುವರಿಸಿದರು. ಮದ್ರಾಸಿನ ಸೆಂಟ್ರಲ್ ಕಾಲೇಜಿನಿಂದ ಕರ್ನಾಟಕ ಸಂಗೀತದಲ್ಲಿ ಅಧ್ಯಾಪನ ವಿಷಯದಲ್ಲಿ ಪದವಿ ಪಡೆದು, ಮದ್ರಾಸ್ ವಿಶ್ವವಿದ್ಯಾನಿಲಯದಿಂದ ಸಂಗೀತದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಜೊತೆಗೆ ಕಲ್ಯಾಣಕೃಷ್ಣ ಭಾಗವತರಲ್ಲಿ ಹೆಚ್ಚಿನ ಶಿಕ್ಷಣವನ್ನೂ ಪಡೆದರು. ತಮಿಳುನಾಡಿನ ಸರ್ಕಾರಿ ಸಂಗೀತ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆಸಲ್ಲಿಸಿದರು. ವಿಶ್ವದಾದ್ಯಂತ ಕಾರ್ಯಕ್ರಮ ನೀಡಿರುವ ಇವರು ಮದ್ರಾಸ್ ಮ್ಯೂಸಿಕ್ ಅಕಾಡೆಮಿಯ ಅತ್ಯುತ್ತಮ ಹಿರಿಯ ವೀಣಾವಾದಕಿ ಪ್ರಶಸ್ತಿಗೆ ಭಾಜನರು. ಆಕಾಶವಾಣಿ ಮತ್ತು ದೂರದರ್ಶನದ ‘ಎ ಟಾಪ್’ ಕಲಾವಿದರು.
ವಿದ್ವಾನ್ ವಿ.ಎಂ.ಗಣೇಶನ್ ಅವರು ಕಾರೈಕುಡಿ ಮುತ್ತು ಅಯ್ಯರ್ ಅವರ ಮಗ ಹಾಗೂ ಶಿಷ್ಯ. ಅಣ್ಣಾಮಲೈ ವಿಶ್ವವಿದ್ಯಾನಿಲಯದಲ್ಲಿ ಮೃದಂಗ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರುವ ಇವರು ಡಿ ಕೆ ಜಯರಾಮನ್, ರಾಮನಾಡ್ ಕೃಷ್ಣನ್, ಎಂ ಡಿ ರಾಮನಾಥನ್ ಮೊದಲಾದ ದಿಗ್ಗಜರಿಗೆ ಮೃದಂಗ ಸಹಕಾರ ನೀಡಿದ್ದಾರೆ.
ವಿದ್ವಾನ್ ಜಿ ಎಸ್ ರಾಮಾನುಜನ್ ಅವರು ವಿದ್ವಾನ್ ಪಿ ಜಿ ಲಕ್ಷ್ಮೀನಾರಾಯಣ ಅವರ ಹಿರಿಯ ಶಿಷ್ಯರು. ಎಲ್ಲಾ ಹಿರಿಯ ಕಿರಿಯ ಕಲಾವಿದರಿಗೆ ಪಕ್ಕವಾದ್ಯ ಸಹಕಾರ ನೀಡಿರುವ ಇವರು ಇಂದು ಲಯವಾದನದಲ್ಲಿ ಮುಂಚೂಣಿಯಲ್ಲಿರುವ ಕಲಾವಿದರು.