ಗಾನಭಾರತೀಯು ಪ್ರಖ್ಯಾತ ವೈಣಿಕ ಎಸ್ ಬಾಲಚಂದರ್ ಸಂಸ್ಮರಣಾ ಕಾರ್ಯಕ್ರಮವನ್ನು 12 ಏಪ್ರಿಲ್, 2019ರಂದು ಸಂಜೆ 6 ಗಂಟೆಗೆ ಹಮ್ಮಿಕೊಂಡಿದೆ. ನಾಡಿನ ಹಿರಿಯ ವೈಣಿಕ ವಿದ್ವಾನ್ ಡಿ ಬಾಲಕೃಷ್ಣ ಅವರು ವೀಣಾವಾದನ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಅವರೊಂದಿಗೆ ಅವರ ಶಿಷ್ಯ ವಿದ್ವಾನ್ ಶ್ರೀನಿವಾಸ ಪ್ರಸನ್ನ ವೀಣೆಯಲ್ಲಿ ಸಹಕರಿಸಲಿದ್ದಾರೆ. ವಿದ್ವಾನ್ ಜಿ.ಎಸ್.ರಾಮಾನುಜನ್ ಮೃದಂಗದಲ್ಲಿ ಸಹಕರಿಸಲಿದ್ದಾರೆ. ವಿದ್ವಾನ್ ಫಣೀಂದ್ರ ಭಾಸ್ಕರ ಘಟ ಸಹಕಾರ ನೀಡಲಿದ್ದಾರೆ.
ವಿದ್ವಾನ್ ಡಿ ಬಾಲಕೃಷ್ಣ ವೀಣಾ ಶೇಷಣ್ಣನವರ ಪರಂಪರೆಯ ಖ್ಯಾತ ಪ್ರತಿನಿಧಿ ಪದ್ಮಭೂಷಣ ಡಾ ವಿ ದೊರೆಸ್ವಾಮಿ ಅಯ್ಯಂಗಾರ್ಯರ ಪುತ್ರರು ಹಾಗೂ ಅವರ ಪ್ರಮುಖ ಶಿಷ್ಯರು. ಅವರು ಇಂದು ಮುಂಚೂಣಿಯಲ್ಲಿರುವ ವೀಣಾವಾದಕರು ಮತ್ತು ಮೈಸೂರು ಶೈಲಿಯ ಹೆಸರಾಂತ ಪ್ರತಿಪಾದಕರು. ಕಟ್ಟುನಿಟ್ಟಾಗಿ ಗುರುಕುಲ ಮಾದರಿಯಲ್ಲಿ ಶಿಕ್ಷಣ ಪಡೆದಿರುವ ಬಾಲಕೃಷ್ಣ ಅವರು ವೀಣಾವಾದನದಲ್ಲಿ ತಮ್ಮ ಅಸ್ಮಿತೆಯನ್ನು ಮೂಡಿಸಿದ್ದಾರೆ. ತಮ್ಮ ತಂದೆಯೊಡನೆ ಹಲವು ಕಚೇರಿಗಳಲ್ಲಿ ನುಡಿಸಿದ್ದಾರೆ. ಶುದ್ಧಸ್ವರಗಳು, ರಾಗವಿಸ್ತಾರ ಮತ್ತು ಭಾವವ್ಯಂಜಕತೆ ಅವರ ವೈಣಿಕೆಯ ಹೆಗ್ಗುರುತು. ಆಕಾಶವಾಣಿ ಮತ್ತು ದೂರದರ್ಶನದ ‘ಎ ಟಾಪ್’ ಕಲಾವಿದರು. ತನಿ ಕಚೇರಿಗಳೇ ಅಲ್ಲದೆ ದ್ವಂದ್ವ ವೀಣೆ, ತ್ರಯ ಹಾಗೂ ಪಂಚವೀಣಾ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಕರ್ನಾಟಕ ಮತ್ತು ಹಿಂದುಸ್ತಾನಿಯ ಖ್ಯಾತ ಕಲಾವಿದರೊಂದಿಗೆ ಜುಗಲ್ಬಂದಿ ನುಡಿಸಿದ್ದಾರೆ. ಭಾರತ ಹಾಗೂ ವಿದೇಶದ ಪ್ರತಿಷ್ಠಿತ ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ. ಹಲವು ಶಿಷ್ಯರಿಗೆ ಮಾರ್ಗದರ್ಶನ ನೀಡಿದ್ದಾರೆ. ಮದ್ರಾಸ್ ಮ್ಯೂಸಿಕ್ ಅಕಾಡೆಮಿಯ ಅತ್ಯುತ್ತಮ ವೀಣಾವಾದಕ ಪ್ರಶಸ್ತಿ, ಗಾನಕಲಾಶ್ರೀ, ವೈಣಿಕಬ್ರಹ್ಮ ಪ್ರಶಸ್ತಿ, ಕರ್ನಾಟಕ ಕಲಾಶ್ರೀ ಮುಂತಾದ ಹಲವು ಪ್ರಶಸ್ತಿಗಳು ಇವರಿಗೆ ಲಭಿಸಿವೆ.
ವಿದ್ವಾನ್ ಶ್ರೀನಿವಾಸ ಪ್ರಸನ್ನ ಅವರು ವಿದ್ವಾನ್ ಡಿ ಬಾಲಕೃಷ್ಣ ಅವರ ಪ್ರಮುಖ ಶಿಷ್ಯರಲ್ಲಿ ಒಬ್ಬರು.
ವಿದ್ವಾನ್ ಜಿ ಎಸ್ ರಾಮಾನುಜನ್ ಅವರು ವಿದ್ವಾನ್ ಪಿ.ಜಿ ಲಕ್ಷ್ಮೀನಾರಾಯಣ ಅವರ ಹಿರಿಯ ಶಿಷ್ಯರಲ್ಲಿ ಒಬ್ಬರು. ಮೃದಂಗ ಘಟವಾದನಗಳೆರಡರಲ್ಲೂ ಸಮಾನ ಪರಿಣತಿ ಹೊಂದಿದ್ದಾರೆ. ಕರ್ನಾಟಕ ಸಂಗೀತದ ಖ್ಯಾತರೆಲ್ಲರಿಗೂ ಮೃದಂಗ ಹಾಗೂ ಘಟ ಪಕ್ಕವಾದ್ಯವನ್ನು ನುಡಿಸಿದ್ದಾರೆ.
ವಿದ್ವಾನ್ ಫಣೀಂದ್ರ ಭಾಸ್ಕರ್ ವಿದ್ವಾನ್ ಸುಧೀಂದ್ರ ಅವರ ಶಿಷ್ಯರು. ಅತ್ಯಂತ ಭರವಸೆಯ ಯುವ ಕಲಾವಿದರು. ಹಲವಾರು ಹಿರಿಯ ಕಲಾವಿದರಿಗೆ ನುಡಿಸಿರುವ ಅನುಭವ ಉಳ್ಳವರು.