ಗಾನಭಾರತೀ ಸಂಸ್ಥೆಯು ಇಂಡಿಯನ್ ಫೌಂಡೇಷನ್ ಫಾರ್ ಆಟ್ರ್ಸ್ ಸಹಯೋಗದಲ್ಲಿ ಪ್ರಸಿದ್ಧ ಮರಾಠಿ ವಾರಿಕಾರಿ ಕವಯತ್ರಿಯರ ಹಾಡುಗಳನ್ನು ಆಧರಿಸಿದ ವಿಠ್ಠು ಮಾಜಾ ಸಂಗೀತ ಕಾರ್ಯಕ್ರಮವನ್ನು ಮೈಸೂರಿನಲ್ಲಿ ಸಂಘಟಿಸುತ್ತಿದೆ. ಪ್ರಖ್ಯಾತ ಗಾಯಕಿ ಶ್ರುತಿ ವಿಶ್ವನಾಥ್,ಶ್ರೀ ಹಿತೇಶ್ ದುಟಿಯಾ ಹಾಗೂ ವಿನಾಯಕ್ ನೇಟ್ಕೆ ಅವರೊಂದಿಗೆ ಗಾನಭಾರತಿಯ ರಮಾಬಾಯಿ ಗೋವಿಂದರಾವ್ ಸಭಾಂಗಣದಲ್ಲಿ ಮಾರ್ಚಿ 2, ಸಂಜೆ 6:00 ಗಂಟೆಗೆ ಈ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.
ಶ್ರುತಿ ವಿಶ್ವನಾಥ್ ಅವರು ಸಂಗೀತಗಾರ್ತಿ ಹಾಗೂ ಸಂಯೋಜಕಿ. ಶಾಸ್ತ್ರೀಯ ಹಾಗೂ ಜನಪದ ಸಂಗೀತಕ್ಕೆ ಹೇಳಿ ಮಾಡಿಸಿದ ಕಂಠ. 20 ವರ್ಷಗಳ ಕಾಲ ಸಂಗೀತಕಲಾಚಾರ್ಯ ಬಿ ಕೃಷ್ಣಮೂರ್ತಿಯವರಲ್ಲಿ ಹಾಗೂ ಕೋಮಂದೂರಿ ಶೇಷಾದ್ರಿ ಅವರಲ್ಲಿ ಕರ್ನಾಟಕ ಸಂಗೀತ ಅಭ್ಯಾಸ ಮಾಡಿದ್ದಾರೆ. ಕಬೀರರ ಸಂಗೀತದ ಮೋಡಿಗೆ ಮರುಳಾಗಿ, ಅನುಭಾವ ಕಾವ್ಯದ ಜಗತ್ತಿನತ್ತ ಹೊರಳಿದ ಶ್ರುತಿ ಅಭಂಗ್, ನಿರ್ಗುಣಿ ಪದ್ಯಗಳನ್ನು ಹಾಗೂ ದಾಸರ ಪದಗಳನ್ನು ದೇಶ ವಿದೇಶಗಳಲ್ಲಿ, ಮುಂಬೈಯ ಕಬೀರ್ ಉತ್ಸವ, ವಿಯೆನ್ನಾದ ರಾಗ ಫೋರಂ ಫಾರ್ ಇಂಡಿಯಾ ಹೀಗೆ ಹಲವು ವೇದಿಕೆಗಳಲ್ಲಿ ಹಾಡಿದ್ದಾರೆ. ವಾರಿಕಾರಿ ಸಂಪ್ರದಾಯದಲ್ಲಿ ಭಕ್ತಿ ಎನ್ನುವುದು ವಿವಿಧ ರೀತಿಯಲ್ಲಿ ಅಭಿವ್ಯಕ್ತಿಗೊಳ್ಳುತ್ತದೆ. ಸಂಪ್ರದಾಯ ಮೀರಿದ ಜಾನಾಬಾಯಿಯ ಭಕ್ತಿ, ಆವೂ ಬಾಯಿಯ ನಿರಾಕಾರ ಭಕ್ತಿ, ಕನ್ಹೋಪಾತ್ರಳ ಹೃದಯಕರಗಿಸುವ ಮೊರೆ, ಮುಕ್ತಾಬಾಯಿಯ ಒಗಟುಗಳು, ಗೋನಾ ಬಾಯಿಯ ಆಕ್ಷೇಪಣೆಗಳು ಹೀಗೆ ಈ ಮಹಿಳೆಯರು ತಮ್ಮದೇ ಆದ ರೀತಿಯಲ್ಲಿ ಭಕ್ತಿಯನ್ನು ಅಭಿವ್ಯಕ್ತಿಸಿದ್ದಾರೆ. ಈ ಬಗ್ಗೆ ಆಳವಾದ ಸಂಶೋಧನೆ ಮಾಡಿರುವ ಶ್ರುತಿ ಇದರ ಪ್ರಸ್ತುತಿಯಲ್ಲಿ ಗಂಭೀರವಾಗಿ ತೊಡಗಿಕೊಂಡಿದ್ದಾರೆ.