ಗಾನಭಾರತಿಯಲ್ಲಿ ತರುಣಭಾರತೀ
ಗಾನಭಾರತೀ ಯುವ ಕಲಾವಿದರಿಗಾಗಿ ಪ್ರತಿವರ್ಷ ನಡೆಸುವ ತರುಣಭಾರತೀ ಕಾರ್ಯಕ್ರಮವನ್ನು ಈ ವರ್ಷ ಜನವರಿ 31, ಹಾಗೂ ಫೆಬ್ರುವರಿ 1ರಂದು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮ ಪ್ರತಿದಿನ ಸಂಜೆ 6ರಿಂದ 9ಗಂಟೆಯವರೆಗೆ ನಡೆಯಲಿದೆ. ನಾಲ್ಕು ಯುವ ಪ್ರತಿಭಾವಂತ ಕಲಾವಿದರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಜನವರಿ 31
ಸಂಜೆ 6ರಿಂದ 7:30ರವರೆಗೆ ಕುಮಾರಿ ಭಾರ್ಗವಿ ವೆಂಕಟರಾಂ ಗಾಯನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
7:30ರಿಂದ 9ರವರಗೆ ಕುಮಾರಿ ಅಂಜಲಿ ಶ್ರೀರಾಂ ಗಾಯನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಅವರಿಬ್ಬರಿಗೂ ಪಿಟೀಲಿನಲ್ಲಿ ವಿದ್ವಾನ್ ಪ್ರಾದೇಶ್ ಆಚಾರ್ ಹಾಗೂ ವಿದ್ವಾನ್ ವಿಷ್ಣುವರ್ಧನ್ ಮೃದಂಗದಲ್ಲಿ ಸಹಕರಿಸಲಿದ್ದಾರೆ.
ಫೆಬ್ರುವರಿ 1
ಸಂಜೆ 6:00ರಿಂದ 7:30ರವರೆಗೆ ವಿದ್ವಾನ್ ಪಿ. ಗುರುಪ್ರಸಾದ್ ಅವರ ಸ್ಯಾಕ್ಸೋಫೋನ್ ಪ್ರಸ್ತುತ ಪಡಿಸುತ್ತಾರೆ. ಅವರಿಗೆ ವಯೋಲಿನ್ ಸಹಕಾರ ನೀಡಲಿದ್ದಾರೆ ವಿದ್ವಾನ್ ಯಶಸ್ವಿ.
ಸಂಜೆ 7:30ರಿಂದ 9:00ರವರೆಗೆ ವಿದುಷಿ ಪಾವನಿ ಕಾಶೀನಾಥ್ ಅವರ ಗಾಯನ, ಅವರಿಗೆ ವಯೋಲಿನ್ನಿನಲ್ಲಿ ವಿದ್ವಾನ್ ಕೇಶವ್ ಹಾಗೂ ಮೃದಂಗದಲ್ಲಿ ವಿದ್ವಾನ್ ವಿಕ್ರಂ ಭರದ್ವಾಜ್ ಸಹಕರಿಸಲಿದ್ದಾರೆ.
ಕಲಾವಿದರ ಪರಿಚಯ:
ಭಾರ್ಗವಿ ವೆಂಕಟರಾಂ: ಭಾರ್ಗವಿ ವೆಂಕಟರಾಂ ಅವರ ತಂದೆ ವಿದ್ವಾನ್ ಎಚ್ ಕೆ ವೆಂಕಟರಾಂ ಹಾಗೂ ತಾಯಿ ತ್ರಿವೇಣಿ ಸರಳಾಯ. ತಂದೆ ತಾಯಿಯರಿಂದಲೇ ಶಿಕ್ಷಣ ಪ್ರಾರಂಭಿಸಿ ಈಗ ವಿದ್ವಾನ್ ಟಿ ಎಂ ಕೃಷ್ಣ ಅವರಲ್ಲಿ ಕಲಿಯುತ್ತಿದ್ದಾರೆ. ಇವರು ಮದ್ರಾಸಿನ ಮ್ಯೂಸಿಕ್ ಅಕಾಡೆಮಿ, ನಾರದ ಗಾನಸಭಾ, ಷಣ್ಮುಖಾನಂದ ಹಾಲ್ ಮುಂತಾದ ಹಲವು ಪ್ರತಿಷ್ಠಿತ ಸಭೆಗಳಲ್ಲಿ ಹಾಡಿ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ. ಆಕಾಶವಾಣಿಯ ರಾಷ್ಟ್ರಮಟ್ಟದ ಸಂಗೀತ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಇವರಿಗೆ ಪ್ರತಿಭಾಕಾಂಕ್ಷಿ, ಕಿಶೋರ ಪ್ರತಿಭೆ ಇತ್ಯಾದಿ ಪ್ರಶಸ್ತಿಗಳೂ ಬಂದಿವೆ.
ಅಂಜಲಿ ಶ್ರೀರಾಂ: ಅಂಜಲಿ ಶ್ರೀರಾಂ ಪ್ರತಿಭಾನ್ವಿತ ಯುವ ಕಲಾವಿದೆ. ವಿದುಷಿ ನಾಗವಳ್ಳಿ ಶ್ರೀನಾಥ್ ಅವರಲ್ಲಿ ಹಾಗೂ ವಿದುಷಿ ಎಂ ಎಸ್ ಶೀಲಾ ಅವರಲ್ಲಿ ಸಂಗೀತಾಭ್ಯಾಸ ಮಾಡುತ್ತಿದ್ದಾರೆ. ಕರ್ನಾಟಕ ಗಾನಕಲಾ ಪರಿಷತ್, ಜೆಎಸ್ಎಸ್ ಸಂಗೀತ ಸಭಾ, ಸ್ವರಮೂರ್ತಿ ವಿ ಎನ್ ರಾವ್ ಟ್ರಸ್ಟ್ ಮೊದಲಾದ ಸಭೆಗಳಲ್ಲಿ ಇವರ ಕಾರ್ಯಕ್ರಮ ನಡೆದಿದೆ. ಹಲವು ಸಿ.ಡಿ.ಗಳು ಹೊರಬಂದಿವೆ. ಹಲವು ಬಹುಮಾನಗಳು, ಸ್ವರ್ಣ ಕಲಾಶ್ರೀಯಂತಹ ಪ್ರಶಸ್ತಿಗಳು ಇವರಿಗೆ ಲಭಿಸಿವೆ. ಆಕಾಶವಾಣಿಯಲ್ಲಿ ಭಾವಗೀತೆ ಹಾಗೂ ಶಾಸ್ತ್ರೀಯ ಸಂಗೀತ ಕಲಾವಿದೆ.
ಪಿ.ಗುರುಪ್ರಸಾದ್: ಪಿ.ಗುರುಪ್ರಸಾದ್ ಅವರ ತಂದೆ ಸ್ಯಾಕ್ಸೋಫೋನ್ ವಿದ್ವಾನ್ ಶ್ರೀ ಆರ್. ಪ್ರಭಾಕರ್. ತಾತ ನಾಗಸ್ವರ ವಿದ್ವಾನ್ ಸಿ.ರುದ್ರಯ್ಯನವರು. ಮೊದಲು ತಂದೆ ಅನಂತರ ವಿದ್ವಾನ್ ಕೆ. ಜೆ ವೆಂಕಟಾಚಾರ್ ಅವರಲ್ಲಿ ಮತ್ತು ಈಗ ವಿದ್ವಾನ್ ಆರ್.ಎನ್.ತಾರಾನಾಥನ್ ಅವರಲ್ಲಿ ಕಲಿಯುತ್ತಿದ್ದಾರೆ. ಬಾಲಪ್ರತಿಭೆ ಪುರಸ್ಕಾರ, ಸ್ಯಾಕ್ಸೋಫೋನ್ ವಾದನಚತುರ, ಕಲಾ ಕೌಸ್ತುಭ, ಕಾಯಕರತ್ನ ಇತ್ಯಾದಿ ಹಲವು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರು. ನಾದರಂಜಿನಿ ಸಭಾ, ಕರ್ನಾಟಕ ಗಾನಕಲಾ ಪರಿಷತ್, ಗಾನಭಾರತೀ ಮೊದಲಾದ ಹಲವು ಪ್ರಮುಖ ಸಭೆಗಳಲ್ಲಿ ಕಾರ್ಯಕ್ರಮ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.</p>
ಪಾವನಿ ಕಾಶಿನಾಥ್: ಪಾವನಿ ಕಾಶಿನಾಥ್ ಅವರ ಮುತ್ತಾತ ಅರುಣಾಚಲಪ್ಪ ಹಾರ್ಮೋನಿಯಂವಾದಕರು. ತಂದೆ ಕಾಶಿನಾಥ್ ಲಯವಾದಕರು. ತಾಯಿ ಪುಷ್ಪಾ ಕಾಶಿನಾಥ್ ವೀಣಾವಾದಕಿ. ಇವರು ಈಗ ಸಂಗೀತದಲ್ಲಿ ಸ್ನಾತಕೋತ್ತರ ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಆಕಾಶವಾಣಿಯಲ್ಲಿ ಭಕ್ತಿಗೀತೆ ಹಾಗೂ ಭಾವಗೀತೆಯಲ್ಲಿ ‘ಎ’ ದರ್ಜೆ ಕಲಾವಿದೆ. ಆಕಾಶವಾಣಿ ಸಂಗೀತ ಸಮ್ಮೇಳನ, ಕರ್ನಾಟಕ ಗಾನಕಲಾ ಪರಿಷತ್, ಮದ್ರಾಸ್ ಮ್ಯೂಸಿಕ್ ಅಕಾಡೆಮಿ, ಇತ್ಯಾದಿ ಪ್ರತಿಷ್ಠಿತ ಸಭೆಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ. ವಿದುಷಿ ಚಂದ್ರಿಕಾ ಮತ್ತು ವಿದುಷಿ ನೀಲಾ ರಾಂಗೋಪಾಲ್ ಅವರಲ್ಲಿ ಕಲಿಯುತ್ತಿದ್ದಾರೆ. ಗಾನರತ್ನ, ಪ್ರತಿಭಾಕಾಂಕ್ಷಿ, ರಾಗಶ್ರೀ ಮೊದಲಾದ ಪ್ರಶಸ್ತಿಗಳನ್ನು ಪಡೆದಿದ್ದಾರೆ.</p>