ಕನ್ನಡ ಗೀತ ಲಹರಿ
ಫೆಬ್ರುವರಿ 24, 2019ರ ಬೆಳಗ್ಗೆ 10ರಿಂದ ರಾತ್ರಿ 9ರವರೆಗೆ ಕನ್ನಡ ಕವಿಗಳ ಕೃತಿಗಳನ್ನು ಆಧರಿಸಿದ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ವಿವಿಧ ಗೇಯ ಪ್ರಕಾರಗಳಲ್ಲಿ ಕನ್ನಡ ಕವಿಗಳ ಪ್ರಮುಖ ಕೃತಿಗಳನ್ನು ಪರಿಚಯಿಸುವ ಅಪರೂಪದ ಕಾರ್ಯಕ್ರಮ ಇದು, ಸುಗಮ ಸಂಗೀತ, ಗಮಕ, ಸಿನಿಮಾಸಂಗೀತ, ರಂಗಸಂಗೀತ, ಕರ್ನಾಟಕ ಹಾಗೂ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಖ್ಯಾತರಾಗಿರುವ ಹಲವರು ಇದರಲ್ಲಿ ಭಾಗವಹಿಸಲಿದ್ದಾರೆ.
ಹಿರಿಯ ಸುಗಮಸಂಗೀತ ಕಲಾವಿದೆಯಾದ ವಿದುಷಿ ಎಚ್ ಆರ್ ಲೀಲಾವತಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಸುಗಮ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ನಂತರ ಹಿರಿಯ ವಿದ್ವಾಂಸರಾದ ವಿದ್ವಾನ್ ಆರ್ ಪರಮಶಿವನ್ ಅವರು ರಂಗಸಂಗೀತವನ್ನು ಹಾಡಲಿದ್ದಾರೆ. ಅವರಿಗೆ ವಿದ್ವಾನ್ ಪುಟ್ಟಣ್ಣಯ್ಯ ಅವರು ಹಾರ್ಮೋನಿಯಂನಲ್ಲಿ ಮತ್ತು ವಿದ್ವಾನ್ ಎಂ ಎಸ್ ಜಯರಾಂ ಅವರು ತಬಲಾದಲ್ಲಿ ಸಹಕರಿಸಲಿದ್ದಾರೆ. ಚಲನಚಿತ್ರ ಹಿನ್ನೆಲೆ ಗಾಯಿಕಿಯರಾಗಿ ಈಗಾಗಲೇ ಪ್ರಖ್ಯಾತರಾಗಿರುವ ವಿದುಷಿ ಲಕ್ಷ್ಮೀ ನಾಗರಾಜ್ ಹಾಗೂ ವಿದುಷಿ ಇಂದು ನಾಗರಾಜ್ ಸಿನಿಮಾದಲ್ಲಿ ಬಳಕೆಯಾಗಿರುವ ಕನ್ನಡ ಕವಿಗಳ ಕೃತಿಗಳನ್ನು ಪರಿಚಯಿಸಿಕೊಡಲಿದ್ದಾರೆ. ವಿದುಷಿ ಧರಿತ್ರೀ ಆನಂದರಾವ್ ಅವರು ಪುತಿನ ಶ್ರೀ ಹರಿಚರಿತೆಯ ಐದನೆಯ ಉಲ್ಲಾಸ ಸದವತಾರಂ ಕುರಿತು ಗಮಕ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಇನ್ನು ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಹಿರಿಯ ಕವಿಗಳ ಕೃತಿಯನ್ನು ಆಧರಿಸಿದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನು ವಿದ್ವಾನ್ ಜಿ ರವಿಕಿರಣ್ ಅವರು ನಡೆಸಿಕೊಡಲಿದ್ದಾರೆ. ಅವರಿಗೆ ಪಿಟೀಲಿನಲ್ಲಿ ವಿದ್ವಾನ್ ಸಿ ಎನ್ ತ್ಯಾಗರಾಜು ಅವರು ಹಾಗೂ ಮೃದಂಗದಲ್ಲಿ ವಿದ್ವಾನ್ ಎಚ್ ಎಲ್ ಶಿವಶಂಕರಸ್ವಾಮಿಯವರು ಸಹಕರಿಸಲಿದ್ದಾರೆ. ಅಂತಿಮವಾಗಿ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಕ್ಷೇತ್ರದ ಹಿರಿಯ ಗಾಯಕರಾದ ಪಂಡಿತ್ ನಾಗರಾಜ ಹವಾಲ್ದಾರ್ ಅವರ ಗಾಯನ ಕಾರ್ಯಕ್ರಮವಿರುತ್ತದೆ. ಅವರೊಂದಿಗೆ ಪಂಡಿತ್ ಓಂಕಾರನಾಥ್ ಹವಾಲ್ದಾರ್ ಸಹಗಾಯನದಲ್ಲೂ, ಪಂಡಿತ್ ಸಮೀರ್ ಹವಾಲ್ದಾರ್ ಅವರು ಹಾರ್ಮೋನಿಯಂನಲ್ಲೂ ಮತ್ತು ಪಂಡಿತ್ ಕೇದಾರನಾಥ ಹವಾಲ್ದಾರ್ ತಬಲಾದಲ್ಲೂ ಸಹಕರಿಸಲಿದ್ದಾರೆ.
ಕನ್ನಡ ಕಲಾರಸಿಕರ ಬೆಂಬಲವನ್ನು ಆಶ್ರಯಿಸಿ ಈ ಕಾರ್ಯಕ್ರಮವನ್ನು ರೂಪಿಸಿದ್ದೇವೆ. ನೂರು ಜನ ಆಸಕ್ತರಿಂದ ತಲಾ ಒಂದು ಸಾವಿರ ರೂಪಾಯಿಯನ್ನು ಸಂಗ್ರಹಿಸಿ ಇದನ್ನು ನಡೆಸಬೇಕೆಂಬ ಆಲೋಚನೆ ನಮ್ಮದು. ಈ ಕಾರ್ಯಕ್ರಮದಲ್ಲಿ ನಮ್ಮ ಜೊತೆಗೆ ತಾವೂ ಕೈಜೋಡಿಸಿ ಬೆಂಬಲ ನೀಡುತ್ತೀರಿ ಎಂಬ ವಿಶ್ವಾಸ ನಮ್ಮದು.